ಬುಧವಾರ, ನವೆಂಬರ್ 13, 2013

ಆಮೇಲಾದರೂ ನಿಮ್ಮ ಅಪ್ಪ-ಅಮ್ಮನ ಮನೆಗೆ ಬನ್ನಿ

ಯಾವಾಗಲೂ ಅಷ್ಟೆ,ಸ್ವಂತಕ್ಕೆ ಅನುಭವವಾಗುವ ವರೆಗೂ ಯಾರ ಮಾತೂ ಯಾರಿಗೂ ಮಹತ್ವ ವೆನಿಸುವುದಿಲ್ಲ. ಇಂದೇಕೋ ನನ್ನ ಬಾಲ್ಯದ  ನೆನಪುಗಳು ಕಾಡುತ್ತಿವೆ.  ನನ್ನ ಹೆತ್ತಮ್ಮ, ನಮ್ಮ ಗೌರತ್ತೆ ಇಂದು ಬಲು ನೆನಪಾಗುತ್ತಿದ್ದಾರೆ. ಕಡುಬಡವನಾಗಿದ್ದ ನಮ್ಮಪ್ಪ ನೆನಪಾಗುತ್ತಿದ್ದಾರೆ
ಇವರೆಲ್ಲರೂ ನೆನಪಾಗುತ್ತಿರುವುದು ಅವರ "ಮಾತೃಹೃದಯದಿಂದ".ಅಪ್ಪನಿಗೂ ಇದೇ ಅನ್ವಯಿಸುತ್ತದೆ.
ನಿತ್ಯದ ಹೊಟ್ಟೆ ತುಂಬಲು ತುತ್ತು ಅನ್ನ ಇಲ್ಲವೇ ಇಲ್ಲ. 5X10 ಅಡಿಯ ಹಳೆಯ ಜಮಖಾನದ  ಮೇಲೆ ಮಲಗುತ್ತಿದ್ದೆವು  ಮಕ್ಕಳೆಲ್ಲಾ. ಬಹುಷ: ಆ ಜಮಖಾನವೂ ನಮ್ಮ  ಪುಟ್ಟನಂಜತ್ತೆ ಮನೆಯಿಂದ ತಂದಿದ್ದಿರಬೇಕು. ಗೌರತ್ತೆಗೆ ಒಂದು ಗೋಣೀಚೀಲ. ನಾವಾರು ಜನ ಮಕ್ಕಳು.ನಮ್ಮಮ್ಮ ಯಾವಾಗ ಮಲಗಿ ಯಾವಾಗ ಏಳುತ್ತಿದ್ದರು ಗೊತ್ತೇ ಇಲ್ಲ. ಯಾವಾಗಲೋ ನಮ್ಮ ನಡುವೆ ಮಲಗಿ ಎಲ್ಲರಿಗೂ ಮುಂಚೆ ಎದ್ದು ತಮ್ಮ ಕೆಲಸದಲ್ಲಿ ತೊಡಗುತ್ತಿದ್ದರು.ನಮ್ಮ ದೊಡ್ದಮ್ಮ ಒಂದು ಚಾಪೆಯ ಮೇಲೆ ಮಲಗುತ್ತಿದ್ದರು. ಜೊತೆಗೆ ನಮ್ಮ ಅಜ್ಜಿ [ತಂದೆಯವರ ತಾಯಿ] ಅಮ್ಮನ ಅಮ್ಮ. ನನಗೆ ತಿಳುವಳಿಕೆ ಬಂದಾಗ ನಮ್ಮ ಮನೆಯಲ್ಲಿದ್ದ ಜನ ಇವರು. ಅದಕ್ಕೆ ಮುಂಚೆ ಮೂರು ಮಕ್ಕಳೊಡನೆ ನಮ್ಮ  ಸೋದರತ್ತೆ ಪುಟ್ಟನಂಜಮ್ಮ ನ ಕುಟುಂಬವೂ ಕೆಲಕಾಲ ನಮ್ಮ ಮನೆಯಲ್ಲಿಯೇ ಇದ್ದರಂತೆ. ಪಾಪ! ನಮ್ಮ ಮಾವನ ಅಕಾಲಿಕ ಮರಣದ ಪರಿಣಾಮ ನಮ್ಮ ಸೋದರತ್ತೆಯ ಸಂಸಾರವನ್ನು  ಚಿಕ್ಕಮಗಳೂರಿನಿಂದ ನಮ್ಮಪ್ಪ ಕರೆದುಕೊಂಡು ಬಂದಿದ್ದರಂತೆ. ಅವರ ಮನಸ್ಸು ಹೇಗಿದೆ ನೋಡಿ, ಮಕ್ಕಳಿಗೆ ಹಾಕಲು ತುತ್ತು     ಅನ್ನಕ್ಕೆ ದಾರಿದ್ರ್ಯವಿದ್ದರೂ ಮಾನಸಿಕ ದಾರಿದ್ರ್ಯವಿರಲಿಲ್ಲ. ಒಂದು ಎತ್ತಿನ ಗಾಡಿ ಮಾಡಿಕೊಂಡು ಹೋಗಿ ಅಕ್ಕ ಮಕ್ಕಳನ್ನು ಕರೆದು ಕೊಂಡು ಬಂದೇ ಬಿಟ್ಟರು. ನಮ್ಮ ಪುಟ್ಟನಂಜತ್ತೆಯ ಮನೆಯಲ್ಲಿದ್ದ ಬೆಂಚುಗಳು, ಹಂಡೆ,ಪಾತ್ರೆ ಪಗಡಿ ಎಲ್ಲವೂ ನಮ್ಮ ಮನೆಗೆ ಸೇರಿದ್ದಾಯ್ತು. ಈಗಲೂ ಎರಡು ಬೆಂಚುಗಳನ್ನು ಸೇರಿಸಿ ನನ್ನ ತಮ್ಮ ಮಂಚದಂತೆ ಮಾಡಿಕೊಂಡು ನಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದಾನೆ. ಆ ಮಂಚವನ್ನು ನೋಡಿದೊಡನೆ  ನಮ್ಮ ಅತ್ತೆ-ಮಾವ ನೆನಪಾಗುತ್ತಾರೆ.
ಯಾಕೆ ಇಷ್ಟೆಲ್ಲಾ ಮನೆಪುರಾಣವನ್ನು ಬರೆದೆನೆಂದರೆ  ಅದರಿಂದ ಇಂದಿನ ಮಕ್ಕಳು ಕಲಿಯುವುದು ಬಹಳ ಇದೆ. ಆದರೆ ಆಡಂಬರದ ಜಗತ್ತಿಗೆ ಬಲಿಯಾಗಿರುವ ಇಂದಿನ ಜನರಿಗೆ ಅದು ಅರ್ಥವಾಗುವುದಿಲ್ಲ ಎಂಬ ಮಾತು ಬೇರೆ. ಆದರೂ ನಮ್ಮ ಕಾಲದ್ದನ್ನು ನಾವು ದಾಖಲು ಮಾಡಿಬಿಡುವುದು ಸೂಕ್ತವೆಂದು ನನ್ನ ಭಾವನೆ. ಅದರ ಪ್ರಯೋಜನ ಆದರೆ ಸಂತೋಷ. ಆಗದಿದ್ದರೆ ಅವರಿಗೇ ನಷ್ಟ.

ಅದೇನು ಲಾಭ ನಷ್ಟದ ಮಾತು ಅಂತೀರಾ?

ಅಂದು ಆರ್ಥಿಕ ಬಡತನ ಬಹಳವಾಗಿತ್ತು ನಿಜ. ಆದರೆ ಪ್ರೀತಿ, ವಿಶ್ವಾಸ,ವಾತ್ಸಲ್ಯ,ಮಮಕಾರ, ನಮ್ಮವರೆನ್ನುವ ಭಾವ ತೀವ್ರವಾಗಿತ್ತು. ಅದರ ಪರಿಣಾಮ ಮನೆಯಲ್ಲಿ ಸೆಕ್ಯೂರಿಟಿ ಇತ್ತು. ಮನೆಯಲ್ಲಿದ್ದ  ಹತ್ತು ಹನ್ನೆರಡು  ಜನರಲ್ಲಿ ಯಾರೋ ಒಬ್ಬರಿಗೆ ಆರೋಗ್ಯ ತಪ್ಪಿದರೆ ಸುಧಾರಿಸಲು ನಾಲ್ಕಾರು ಜನರು ಇರುತ್ತಿದ್ದರು. ನಿಜ ಹೇಳುವೆ. ನಮಗೆ ರುಚಿ ರುಚಿಯಾದ ಆಹಾರ ಸಿಕ್ಕದೆ ಇದ್ದಿರಬಹುದು. ಆದರೆ ನಮ್ಮಪ್ಪ ಅನ್ನಮ್ಮ ,ನಮ್ಮ ಗೌರತ್ತೆ , ಅವರ ಪ್ರಾಣ ಒತ್ತೆ ಇಟ್ಟು ನಮ್ಮ ಹೊಟ್ಟೆಗೆ ಏನೋ ಹೊಂದಿಸುತ್ತಿದ್ದರು. ಅದು ದೊಡ್ದ ಕತೆ. ಅದನ್ನು ಇಲ್ಲಿ ಪ್ರಸ್ತಾಪಿಸುವುದಿಲ್ಲ. ಆದರೆ ಮಕ್ಕಳು ಯಾರಿಗಾದರೂ ಹುಶಾರು ತಪ್ಪಿದ್ದರೆ ಮೂಲೆಯಲ್ಲಿ ಹಾಸಿಗೆ ಹಿಡಿದು ಮಲಗಿದ್ದ ನಮ್ಮಜ್ಜಿಯ      ಮುಂದೆ ಒಂದು ಚಾಪೆ ಹಾಕಿ ಮಕ್ಕಳನ್ನು ಮಲಗಿಸಿದರೆ ಸಾಕು ಅವರ ಕೈ ಮಕ್ಕಳ ತಲೆಯನ್ನು ಸವರಲು ಶುರುವಾಗುತ್ತಿತ್ತು. "ಅಯ್ಯೋ ಮುಂಡೇದೇ, ಜ್ವರ ಬಂದು ಬಿಟ್ಟಿದೆಯಲ್ಲಾ! ಆ ದೇವರಿಗೆ ಕಣ್ಣಿಲ್ಲವೇ, ನಿಮ್ಮಂತ ಮಕ್ಕಳನ್ನು ಗೋಳುಹೊಯ್ದುಕೊಳ್ಳುತ್ತಾನಲ್ಲಾ! ಕಣ್ಮುಚ್ಚಿ ಮಲಗು ಕಂದಾ ನಿನಗೆ ನಿದ್ರೆ ಬರೆಸುವೆನೆಂದು ಹೇಳುತ್ತಾ ಅವರು ತಲೆ ತಡವರೆಸುತ್ತಿದ್ದರೆ ಯಾವಾಗ ನಿದ್ರೆ ಬರುತ್ತಿತ್ತೋ ಗೊತ್ತಾಗುತ್ತಿರಲಿಲ್ಲ.

ಈಗ ಹೇಳಿ ಆ ಪ್ರೀತಿಯ ಮಾಂತ್ರಿಕ ಕೈಗಿರುವ ಶಕ್ತಿ ನಿಮ್ಮ ಯಾವ ವೈದ್ಯರಿಗಿದೆ?

ಇಂದು......
ಜ್ವರ ಬಂತು, ಸ್ಟ್ರೆಸ್ ನಿಂದಾಗಿ ವಿಪರೀತ ತಲೆನೋವು, ಬಿ.ಪಿ ಹೆಚ್ಚಾಯ್ತು, ಏನೋ ಸರಿ ಇಲ್ಲವೆನಿಸಿದಕೂಡಲೇ ವೈದ್ಯರಿಗೆ  ಫೋನ್ ಮಾಡಿ ಅವರು ಬಂದರೆ ಸರಿ ಇಲ್ಲದಿದ್ದರೆ ಕಾರ್ ನಲ್ಲಿ ಕೂರಿಸಿಕೊಂದು ಹೋಗಿ ಒಂದು ಇಂಜಕ್ಷನ್ ಚುಚ್ಚಿಸಿ, ಬರುವಾಗಲೇ ಎಳನೀರು ತಂದು ,ಡಾಕ್ಟರ್ ಕೊಟ್ಟ  ಸ್ಟ್ರಾಂಗ್ ಡೋಸ್    ಕ್ಯಾಪ್ಸುಲ್ ನುಂಗಿ ಹೊದ್ದಿಗೆ ಹೊದ್ದು ಮಲಗಿದರೆ ಮುಗೀತು.ನಿಜ ಹೇಳಿ, ಆರೋಗ್ಯತಪ್ಪಿದವರ ಪಕ್ಕದಲ್ಲಿದ್ದು ಅವರ ಮೈ ತಡವರಿಸುತ್ತ, ಅವರಿಗೆ "ನಾನಿದ್ದೇನೆ ಹೆದರ ಬೇಡ" ಎಂಬ ಪ್ರೀತಿಯ ಬರವಸೆಯ ಮಾತುಗಳನ್ನಾಡುವ ಮಂದಿ ಎಷ್ಟು ಜನರಿದ್ದಾರೆ? ಹೇಳಿ.

ಅಲ್ಲೆಲ್ಲೋ ಮಾತು ಶುರುವಾಗಿರಬಹುದು. ಇವನೆಲ್ಲೋ ಹುಚ್ಚ. ಅವತ್ತೆಲ್ಲಿ? ಇವತ್ತೆಲ್ಲಿ? ಅಂದಿನ ಜನರ ಬದುಕೆಲ್ಲಿ? ಇಂದಿನ ಜನರ ಬದುಕೆಲ್ಲಿ? ನಾಲ್ಕು ಜನರಂತೆ ನಾವಿರ ಬೇಡವೇ? ಅದಕ್ಕಾಗಿ ಲಕ್ಷ ಲಕ್ಷ ದುಡಿಯದಿದ್ದರೆ ನಮ್ಮ ಮಕ್ಕಳ ಕೈಗೆ ಕೊಡಬೇಕಾಗುತ್ತದೆ ಚಿಪ್ಪು   !!!

ಹೌದು, ಈ ಮಾತು ನನ್ನ ಕಿವಿಗೆ ಬೀಳುತ್ತಲೇ ಇರುತ್ತದೆ. ಆಗ ಕನಿಕರ ಪಡುವಂತಾಗುತ್ತದೆ. ಅಯ್ಯೋ, ಭಗವಂತಾ!  ದುಡಿದು, ದುಡಿದು, ಹೊಟ್ಟೆಗೆ ತಿನ್ನಲೂ ಪುರಸೊತ್ತಿಲ್ಲದಂತೆ ದುಡಿದು, ಗಂಡ   ಹೆಂಡತಿ ಹಗಲು ರಾತ್ರಿ ಎನ್ನದೆ ಪಾಳಿಯಲ್ಲಿ ದುಡಿದು, ಕೆಲಸ ಮುಗಿಸಿ ನಡುರಾತ್ರಿಯಲ್ಲಿ ಕ್ಯಾಬ್ ನಲ್ಲಿ ಬರುವಾಗ ಜೀವವನ್ನು ಕೈಯಲ್ಲಿ ಹಿಡಿದುಕೊಂದು ಬರುತ್ತಿದ್ದೀರಲ್ಲಾ! ಇದು ನಿಮಗೆ ಬೇಕಾ? ಇಂತಾ ದುಡಿಮೆ ಮಾಡಿ ಬಂಗಲೆಯ ಜೀವನ ಮಾಡಬೇಕಾ? ಅಪ್ಪ-ಅಮ್ಮ ಮನೆಯಲ್ಲಿಲ್ಲದೆ ಮಕ್ಕಳು ಮಾತ್ರ ಮನೆಯಲ್ಲಿದ್ದಾಗ ಏನೇನು ಅಚಾತುರ್ಯ ನಡೀತಿದೆ? ಎಂಬಾ ಅರಿವೇ ನಿಮಗಿಲ್ಲವಲ್ಲಾ! ಎಂಬ ದೀನ ನುಡಿಯು ಯಾರ ಕಿವಿಗೂ ಬೀಳುವುದೇ ಇಲ್ಲ.

ನಮ್ಮಂತ ಅತ್ತಲೂ ಇಲ್ಲ-ಇತ್ತಲೂ ಇಲ್ಲದ ತ್ರಿಶಂಕುಗಳು ಉಗುಳಲಾರದೆ ಬಿಸಿ ತುಪ್ಪವ ನುಂಗಲಾರದೆ ಪರದಾಡುತ್ತಿರುವ ನನ್ನ ವಯೋಮಾನದ ಜನರಿದ್ದಾರಲ್ಲಾ, ಅವರದು ಬಲು ಕಷ್ಟ ರೀ.

ಅಂದು ನಮ್ಮ ಮನೆಯಲ್ಲಿದ್ದುದು  5X10 ಅಡಿಯ ಹಳೆಯ ಜಮಖಾನ. ಹಳ್ಳಿಯಲ್ಲಿ  ಹಳೆಯ ನಾಡಹೆಂಚಿನ ಮನೆ. ಮನೆ ತುಂಬಾ ಜನ.
ಇಂದು ಮನೆಯಲ್ಲಿ ಇಪ್ಪತ್ತು ಜನ ಬಂದರೂ ಊಟಕ್ಕೂ ಕೊರತೆ ಇಲ್ಲ. ಮಲಗಲೂ ಚಿಂತೆ   ಇಲ್ಲ. ಮನೆಯಲ್ಲಿ ನಾವಿಬ್ಬರು. ನಾವೇ ಇಬ್ಬರು.

ನಮ್ಮಂತ ಅಪ್ಪ-ಅಮ್ಮಂದಿರಿಗೆ ಮಕ್ಕಳು ಹೇಳಿಬಿಡಬಹುದು " ಮನೆಯನ್ನು ಬಾಡಿಗೆಗೆ ಕೊಟ್ಟು ನಮ್ಮೊಡನೆ ಬಂದು ಇದ್ದು ಬಿಡಿ. ಬಾಡಿಗೆಗೆ ಕೊಟ್ಟು ಹೋಗಿ ಬಿಡಲು 15 ದಿನಗಳು ಸಾಕು. ಈ ಸ್ಥಿತಿಗೆ ಬರಲು ಅದರ ಹಿಂದಿರುವ 40ವರ್ಷಗಳ ಬೆವರಿನ ವಾಸನೆ ನಮ್ಮ ಮನೆಯ ಇಟ್ಟಿಗೆ ಕಣಕಣದಲ್ಲೂ ಸೇರಿದೆಯಲ್ಲಾ!

ಅದಕ್ಕೇನು ಮಾಡಬೇಕು ಅಂತೀರಾ? ಕೆಲಸ ಬಿಟ್ಟು ಬಂದು ಇಲ್ಲಿ ಕೂತು ಬಿಡೋಣವೇ? ಅಂತಾ ಮಕ್ಕಳು ಕೇಳಬಹುದು.ಅವರಿಗೆ ನಮ್ಮಂತವರ ಉತ್ತರ ಇಷ್ಟೆ. " ಮಕ್ಕಳೇ, ನೀವೆಷ್ಟು ದುಡಿದರೂ ದುಡಿಯಬೇಕೆಂಬ ಆಸೆ ತಪ್ಪುವುದಿಲ್ಲ. ನೀವು ಸುಖವಾಗಿ ಯಾವಾಗ ಸಂಸಾರ ಮಾಡುತ್ತೀರಿ? ರಸ್ತೆಯಲ್ಲಿ ಹೋಗಿ ಪಾನಿಪೂರಿ ತಿಂದು ಬಂದರೆ ಸಾಕು ಎಂದು ಕೊಂಡಿದ್ದೀರಲ್ಲಾ! ಅದಕ್ಕೂ ಮೀರಿದ ಸುಖ ಸಂಸಾರದಲ್ಲಿದೆ. ಅದರ ಅರಿವು ನಿಮಗಿಲ್ಲ. ಅದಕ್ಕಾಗಿ ನೀವು ಏನು ಮಾಡಬಹುದು ಗೊತ್ತಾ? 20-25 ವರ್ಷ ದುಡೀರಿ. ಬೇಡ ಎನ್ನುವವರಾರು? ಆಮೇಲಾದರೂ ನಿಮ್ಮ ಅಪ್ಪ-ಅಮ್ಮನ ಮನೆಗೆ ಬನ್ನಿ .ಅಪ್ಪ-ಅಮ್ಮನ ಕಡೆಗಾಲದಲ್ಲಿ ಅವರ ಜೊತೆ ಸುಖವಾಗಿ ಜೀವನ ಮಾಡಿ. ಅವರೂ ಮಕ್ಕಳು ಮರಿ ನೋಡಿ   ಸಂತೊಷ ಪಡ್ತಾರೆ. ಅವರಿಂದ ನಿಮಗೂ ಸೆಕ್ಯೂರಿಟಿ ಫೀಲಿಂಗ್ ಬರುತ್ತೆ. ಮಕ್ಕಳಿಗೆ ಅಪ್ಪ-ಅಮ್ಮನ ಜೊತೆಗೆ ಅಜ್ಜಿ-ತಾತನ ಪ್ರೀತಿ ಸಿಗುತ್ತೆ.ನಿಜವಾಗಿ  ಕೂಡು ಕುಟುಂಬದಲ್ಲಿ ಸಿಗುವಷ್ಟು ಸಂತೋಷ, ಸಂಸ್ಕಾರ,  ಬಿಡಿ ಕುಟುಂಬದಲ್ಲಿ ಸಿಗುವುದಿಲ್ಲ. ಇದು ಇಂದಿನ ಯುವಕರೆಲ್ಲಾ ಯೋಚಿಸಬೇಕಾದ ವಿಷಯ. ಏನಂತೀರಾ?