ಶನಿವಾರ, ನವೆಂಬರ್ 29, 2014

ನಮ್ಮ ಮನೆಗಳು ಹೇಗಿರಬೇಕು

ನಮ್ಮ ಮನೆಗಳು  ಹೇಗಿರಬಾರದೆಂಬುದನ್ನು  ಅಥರ್ವ ವೇದದ ಒಂದು ಮಂತ್ರವು ಸೊಗಸಾಗಿ ಹೇಳಿದೆ.
ಅಸೌ ಯೋ ಅಧರಾತ್ ಗೃಹಸ್ತತ್ರ ಸನ್ತ್ವರಾಯ್ಯ: |
ತತ್ರ ಸೇದಿರ್ನುಚ್ಯತು  ಸರ್ವಾಶ್ಚ ಯಾತು ಧಾನ್ಯ: ||
[ಅಥರ್ವ:೨.೧೪.೩]
ಯ: = ಯಾವ
ಗೃಹ:  = ಮನೆಯು
ಅಧರಾದ್ = ಅಂಧಕಾರದಿಂದ ತುಂಬಿ ನಿಮ್ನ ಸ್ಥಿತಿಯಲ್ಲಿರುವುದೋ
ತತ್ರ= ಅಲ್ಲಿ
ಸರ್ವಾ: = ಎಲ್ಲಾ
ಯಾತು ಧಾನ್ಯ: = ಪ್ರಜೆಗಳನ್ನು ಪೀಡಿಸುವ ವಿಪತ್ತುಗಳು, ರೋಗಗಳು
ಅರಾಯ್ಯ: = ಮನುಷ್ಯನ ಧನಸಂಪತ್ತನ್ನು  ಮತ್ತು ಶೋಭೆಯನ್ನು ಹರಣ ಮಾಡುವಂತಹ ಸಂಕಷ್ಟಗಳು
ಸನ್ತು = ಇರುತ್ತವೆ
ತತ್ರ = ಅಲ್ಲಿ
ಸೇದಿ: = ದು:ಖಗಳು
ನಿ ಉಚ್ಯತು = ಯಾವಾಗಲೂ ಇರುತ್ತವೆ
ಹಾಗೆಂದರೇನು?
ಸತ್ಪುರುಷರಿಲ್ಲದ , ಸತ್ ಕಾರ್ಯಗಳು ನಡೆಯದ ,ಸಜ್ಜನರು ಬಾರದ ,ವಿದ್ಯೆ ವಿಜ್ಞಾನಗಳಿಲ್ಲದ ಮನೆಗಳು ಸಕಲ ಅನರ್ಥಗಳಿಗೂ ನಿಲಯಗಳಾಗುತ್ತವೆ. ಅಲ್ಲಿ ದುಷ್ಟರು . ವಿಷಕೀಟಗಳು.ವಿವಿಧವ್ಯಾಧಿಗಳು, ಅನೇಕ ಆಪತ್ತುಗಳು, ದು:ಖಗಳು ನೆಲೆಸಲು ಅವಕಾಶವಾಗುತ್ತದೆ. ಅಲ್ಲಿ ಒಳ್ಳೆಯವರು ಇರಲಾರರು. ಕೆಲವು ಮನೆಗಳಿಗೆ ಹೋದರೆ ಸ್ವಲ್ಪಹೊತ್ತು ಕುಳಿತುಕೊಳ್ಳಲೂ ಸಾಧ್ಯವಾಗದೆ ಅಲ್ಲಿಂದ ಕಾಲ್ಕಿತ್ತರೆ ಸಾಕೆನಿಸುತ್ತದೆ.ಇನ್ನು ಕೆಲವು ಮನೆಗಳಲ್ಲಿ ಇನ್ನೂ ಸ್ವಲ್ಪ ಸಮಯ ಇದ್ದು ಹೋಗೋಣ   ಎನಿಸುತ್ತದೆ. ಇಂತಹ ಅನುಭವ ಸಾಮಾನ್ಯವಾಗಿ ಎಲ್ಲರಿಗೂ ಆಗಿರುತ್ತದೆ.
ಸಾದು ಸತ್ಪುರುಷರ ಸಮಾಗಮ,ಸತ್ಕರ್ಮಗಳು ನಡೆಯುವ ಗೃಹಗಳು ಸುಖದಾಯಕವಾಗಿ ಇರಬಲ್ಲವು. ನಾವು ಹಲವು ಗ್ರಂಥಗಳನ್ನು ಓದಬಹುದು, ಹಲವು ಉಪನ್ಯಾಸಗಳನ್ನು ಕೇಳಬಹುದು, ಮಠ ಮಂದಿರಗಳಿಗೆ ಸುತ್ತಬಹುದು, ತೀರ್ಥಯಾತ್ರೆಗಳನ್ನು ಮಾಡಬಹುದು, ಆದರೆ ನಮ್ಮ ಮನೆ ಹೇಗಿರಬೇಕೆಂದು ಎಂದಾದರೂ ಯೋಚಿಸಿದ್ದೇವೆಯೇ? ನಮ್ಮ ಮನೆಯಲ್ಲಿ ಸಿಗದ ಸುಖ-ನೆಮ್ಮದಿಯನ್ನು ಬೇರೆಲ್ಲೋ ಹುಡುಕಿ ಹೊರಟರೆ ಸಿಕ್ಕೀತೇ?
ನಮ್ಮ ಚಿಕ್ಕವಯಸ್ಸಿನಲ್ಲಿ ಹಿರಿಯರು ನಮಗೆ ಹೇಳುತ್ತಿದ್ದ ಮಾತು ನೆನಪಿಗೆ ಬರುತ್ತದೆ” ಮನೆಯಲ್ಲಿ ಯಾವಾಗಲೂ ಋಣಾತ್ಮಕ ಮಾತುಗಳನ್ನು ಆಡಬೇಡಿ, ಜಗಳ ಮಾಡಬೇಡಿ. ಬೈದಾಡಬೇಡಿ?.ಹೀಗೆ ಮಾಡಿದರೆ ಮನೆಯ ತೊಲೆಯಲ್ಲಿ ಕುಳಿತಿರುವ ವಾಸ್ತು ಪುರುಷ” ಅಸ್ತು” ಎಂದು ಬಿಡುತ್ತಾನೆ. ಆಗ ಕೆಟ್ಟ  ಮಾತುಗಳನ್ನಾಡಿದರೆ ಕೆಟ್ಟ   ಪರಿಣಾಮವೇ ಆಗುತ್ತದೆ. ಅದಕ್ಕಾಗಿ ಒಳ್ಳೆಯ ಮಾತುಗಳನ್ನೇ ಆಡಿ, ಆಗ ಒಳ್ಳೆಯದೇ ಆಗುತ್ತದೆ.
ವಾಸ್ತು ಪುರುಷ ಎಲ್ಲಿರುತ್ತಾನೋ, ಇರುವುದಿಲ್ಲವೋ ಚಿಂತಿಸಬೇಕಾಗಿಲ್ಲ. ಆದರೆ  ನಮ್ಮ ಹಿರಿಯರ ಮಾತಿನ ಸಂದೇಶವನ್ನು ಗಮನಿಸಬೆಕಲ್ಲವೇ? ಒಳ್ಳೆಯ ಮಾತುಗಳು ಕಿವಿಯಮೇಲೆ ಬೀಳುತ್ತಿದ್ದರೆ ಒಳ್ಳೆಯ ಪರಿಣಾಮ ಆಗಲೇಬೇಕು. ಇದು ವೈಜ್ಞಾನಿಕವಾಗಿ ಕೂಡ ಸತ್ಯವೇ ಹೌದು. ವೇದವು ಇನ್ನೂ ಮುಂದೆ ಹೋಗಿ ತಿಳಿಸುತ್ತದೆ” ಸಜ್ಜನರ ಸಾಮೀಪ್ಯವಿರಬೇಕು , ಸತ್ ಕಾರ್ಯಗಳು ನಡೆಯುತ್ತಿರಬೇಕು” ಇಲ್ಲವಾದಲ್ಲಿ  ಅಂತಹ ಮನೆಯಲ್ಲಿ ಜನರ ನೆಮ್ಮದಿ ಹಾಳಾಗುತ್ತದೆ, ಅನಾರೋಗ್ಯ,ಅಸಹನೆ, ದು:ಖ ಎಲ್ಲವೂ ಸುತ್ತಿಕೊಳ್ಳುತ್ತವೆ.

ಹೌದಲ್ಲವೇ? ಇವೆಲ್ಲವೂ ನಮ್ಮ ಅರಿವಿಗೆ ತಿಳಿದಿರುವ ವಿಷಯಗಳೇ ಆಗಿವೆ. ಆದರೂ ನಮ್ಮ ಮನೆಗಳಿಗೆ ಯಾರು ಬಂದು ಹೋಗುತ್ತಾರೇ, ಯಾವ ಮಾತುಕತೆ ನಡೆಯುತ್ತದೆ, ಯಾವುದನ್ನೂ ನಾವು ಗಮನಿಸುವುದೇ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ  ನಮ್ಮ ಮನೆಯಲ್ಲಿ ಸ್ಥಾನಪಡೆದಿರುವ ಟಿ.ವಿ ಎಂಬ ಪೆಡಂಬೂತ!!
ಟಿ.ವಿಯಲ್ಲಿ ಒಳ್ಳೆಯ ಕಾರ್ಯಕ್ರಮಗಳು ಬಿತ್ತರಿಸುವುದಿಲ್ಲವೆಂದಲ್ಲ, ಆದರೆ ಬಹುಪಾಲು ಮನೆಗಳಲ್ಲಿ ಗಮನಿಸಿ, ದಿನದಲ್ಲಿ ಆರೇಳು ಗಂಟೆಗೂ ಮಿಗಿಲಾಗಿ, ಅಶ್ಲೀಲ ದೃಶ್ಯಗಳು, ರಕ್ತಸಿಕ್ತ ಕೊಲೆ ಸುಲಿಗೆಯ ದೃಷ್ಯಗಳು, ಕಿವಿಯನ್ನು ಕತ್ತರಿಸುವಂತಹ ಕರ್ಕಶ ಹಾಡುಗಳು!!
ರಾತ್ರಿ ಮಲಗುವಾಗಲೂ “ ಕ್ರೈಮ್ ಸ್ಟೋರಿ” ನೋಡಿ ಮಲಗುವ ಎಷ್ಟು ಮನೆಗಳಿಲ್ಲಾ! ಮಲಗುವ ವೇಳೆಯಲ್ಲೂ ಇಂತಹ ಭಯಾನಕ ದೃಷ್ಯಗಳನ್ನು ನೋಡಿ ಮಲಗಿದಾಗ ನಿದ್ರೆಯಲ್ಲಿ ನಮ್ಮ ಮನ:ಸ್ಥಿತಿ ಹೇಗಿದ್ದೀತು? ಸುಖವಾದ ನಿದ್ರೆಯು ಬಯಸಿದರೆ ಸಿಕ್ಕೀತೇ?

ನಮ್ಮ ಆರೋಗ್ಯಕ್ಕೂ ನಮ್ಮ ಜೀವನ ಶೈಲಿಗೂ ನೇರವಾದ ಸಂಬಂಧವಿದೆ ಎಂದು ಮನೋವೈದ್ಯರು ಸಾರುತ್ತಿದ್ದಾರೆ, ಆದರೂ ನಾವು ನಮ್ಮ ಸ್ವಾಸ್ಥ್ಯದ ಬಗ್ಗೆ ಗಮನಕೊಟ್ಟಿದ್ದೇವೆಯೇ? ಇತ್ತೀಚೆಗೆ ವೇದ ವಿದ್ವಾಂಸರೊಬ್ಬರೊಡನೆ ಮಾತನಾಡುತ್ತಿದ್ದೆ”  ವೇದ ಮಂತ್ರ ಗಳನ್ನು ನಿತ್ಯವೂ ಪಠಿಸುವುದರಿಂದ ಏನು ಫಲ ಸಿಗುತ್ತೆ? ನಿಮಗೇನು ಪ್ರಯೋಜನವಾಗಿದೆ? ಎಂದು ಕೇಳಿದಾಗ ಅವರು ಹೇಳಿದರು “ ನೋಡಿ ಏನು ಲಾಭ ಎಂದು ನಾನು ತಲೆಕೆಡಸಿಕೊಳ್ಳಲು ಹೋಗಿಲ್ಲ,  ನನಗೀಗ ಎಪ್ಪತ್ತು ವರ್ಷ ವಯಸ್ಸು, ಆರೋಗ್ಯವಾಗಿದ್ದೇನೆ. ಶುಗರ್, ಬಿ.ಪಿ ಅಥವಾ ಯಾವ ಖಾಯಿಲೆಯೂ ಇಲ್ಲ. ನಿತ್ಯವೂ ನನ್ನ ಎಲ್ಲಾ ಕೆಲಸಗಳನ್ನೂ ಮಾಡಿಕೊಳ್ಳುತ್ತೇನೆ, ಬೆಳಿಗ್ಗೆ ಸಂಜೆ  ಒಂದೊಂದು ಗಂಟೆ ಸಂಧ್ಯಾಕರ್ಮಗಳ ಜೊತೆಯಲ್ಲಿ ಒಂದಿಷ್ಟು ವೇದ ಮಂತ್ರಗಳನ್ನು ಹೇಳಿಕೊಳ್ಳುತ್ತೇನೆ. ರಾತ್ರಿ ಎಂಟರೊಳಗೆ ಸ್ವಲ್ಪ ಉಪಹಾರ ಸ್ವೀಕರಿಸಿ  ಹತ್ತರೊಳಗೆ ಹಾಸಿಗೆ ಮೇಲೆ ಹೋದರೆ ಐದು ನಿಮಿಷಗಳಲ್ಲಿ ನಿದ್ರೆ ಬರುತ್ತೆ, ಎಚ್ಚರವಾಗುವಾಗ ಬೆಲಗಿನ ಜಾವ ಐದು ಗಂಟೆಯಾಗಿರುತ್ತೆ. ಐದಕ್ಕೆ ಎದ್ದರೆ ರಾತ್ರಿ ಹತ್ತರವರೆಗೂ ಒಂದಲ್ಲಾ ಒಂದು ಕೆಲಸ ಮಾಡುತ್ತಿರುತ್ತೇನೆ. ಸುಖವಾಗಿದ್ದೇನೆ. ನನಗೆ ಇನ್ನೇನು ಬೇಕು?

ಹೌದು ನಮ್ಮೆಲ್ಲರ ಮನೆಗೂ ಒಂದು ನೀತಿ ಸಂಹಿತೆ ಇರಬೇಕು. ಅದರಮೇಲೆ ನಮ್ಮ ನಿಗಾ ಇರಬೇಕು. ಸಾದು ಸಜ್ಜನರಿಗೆ, ವಿದ್ವಾಂಸರಿಗೆ ಮನೆಯಲ್ಲಿ ಆಶ್ರಯ ಕೊಡಬೇಕು. ಅವರ ಹಿತವಾದ ಮಾತುಗಳು ನಮ್ಮ ಮನೆಯ ಜನರ ಕಿವಿಯಮೇಲೆ ಬೀಳುತ್ತಿರಬೇಕು. ನಮ್ಮ ಮನೆಯಲ್ಲಿ ಸಮಸ್ಯೆ ಇಟ್ಟುಕೊಂಡು ದೇವಾಲಯಗಳಿಗೆ ಸುತ್ತಿದರೆ ಆ ಭಗವಂತನು ಮೆಚ್ಚಿ ಅವನೇ ಬಂದು ನಮ್ಮ ಮನೆ ಸಮಸ್ಯೆಗಳನ್ನು ನಿವಾರಿಸುವುದಿಲ್ಲ. ನಮ್ಮ ಮನೆಯಲ್ಲಿ ಏನೇ ಸಮಸ್ಯೆಗಳಿದ್ದರೂ ಒಂದು ಕುಟುಂಬದ ನಾವೇ ಅದನ್ನು ಸರಿಪಡಿಸಿಕೊಂಡು  ಸಜ್ಜನರ ಸಹವಾಸವನ್ನಿಟ್ಟುಕೊಂಡು ಸತ್ಕರ್ಮಗಳನ್ನು ಮಾಡುತ್ತಾ ನಮ್ಮ ಮನೆಯನ್ನು  ದೇವಾಲಯವನ್ನಾಗಿಯೂ ಮಾಡಬಹುದು, ಸ್ವರ್ಗವಾಗಿಯೂ ಮಾಡಬಹುದು. ಎಲ್ಲವೂ ನಮ್ಮ ಕೈಲೇ ಇದೆ. 

ನಾಗಾಸಧುಗಳು ಬಾಣಾವರದಲ್ಲಿ

ನಾಗಾ ಸಾಧುಗಳು ಬಾಣಾವರದ ಸಾಧುಸಂತ ಸಮಾವೇಷಕ್ಕೆ ಬಂದಿಳಿದಾಗ

ಅದ್ಭುತ! ಅಭೂತ !! ಬಾಣಾವರದ ಸಂತ ಸಮಾವೇಶ


"ಸಾಧು-ಸಂತ ಸಮಾಗಮ" ಎಂಬ ಹೆಸರಿನಲ್ಲಿ ಹಾಸನಜಿಲ್ಲೆಯ ಒಂದು ಪುಟ್ಟ ಊರು ಬಾಣಾವರದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದ ಆರಂಭದ ಮತ್ತು ಎರಡನೆಯ ದಿನದ ಕಾರ್ಯಕ್ರಮಗಳಿಗೆ ಪ್ರತ್ಯಕ್ಷದರ್ಶಿಯಾಗಿದ್ದರಿಂದ ಆ ಬಗ್ಗೆ ವೇದಸುಧೆಯ ಅಭಿಮಾನಿಗಳಿಗೆ ಒಂದಿಷ್ಟು ಮಾಹಿತಿ ಕೊಡುವುದಷ್ಟೇ ಈ ಲೇಖನದ ಉದ್ದೇಶ. ಇದು ಈ ಒಂದು ಬೃಹತ್ ಕಾರ್ಯಕ್ರಮದ ಪೂರ್ಣ ವರದಿಯಲ್ಲ. ಭಾರತದಲ್ಲಿ ಹಲವಾರು ಪಂಥಗಳ ಹೆಸರಲ್ಲಿ ಧರ್ಮದ ಕೆಲಸ ನಡೆಯುತ್ತಿದೆ. ಇಲ್ಲಿ ನಾನು ಕಂಡಿದ್ದು ಭಕ್ತಿ, ಭಕ್ತಿ, ಭಕ್ತಿ, ಭಕ್ತಿಯನ್ನಷ್ಟೇ. ಸುರಿವ ಮಳೆಗೂ ಅಂಜದೆ ಭಕ್ತಿಪರವಶರಾಗಿದ್ದ ನೂರಾರು ವೃದ್ಧರು! ಸಾವಿರಾರು ತರುಣರು. ನಾಗಾಸಾಧುಗಳನ್ನು ಸ್ವಾಗತಿಸುವಾಗ ಮುಗಿಲು ಮುಟ್ಟಿದ "ಹರ ಹರ ಮಹದೇವ್" ಘೋಷಣೆ.
































































ಒಂದು ಪುಟ್ಟ ಊರಿನಲ್ಲಿ ಇಂತಾ ಒಂದು ಮಹಾನ್ ಕಾರ್ಯಕ್ರಮವನ್ನು ಕೆಲವೇ ಭಕ್ತರು ಸೇರಿ ಮಾಡುತ್ತಾರೆಂದರೆ ಅದು ಅದ್ಭುತವೇ ಸರಿ. ಉತ್ತರಭಾರತದ ನಾಗಾಸಾಧುಗಳ ಪರಂಪರೆಯೇ ಬೇರೆ. ದಕ್ಷಿಣದ ಸಂನ್ಯಾಸಿಗಳಂತಲ್ಲ. ದತ್ತಾತ್ರೇಯ  ಉಪಾಸನೆ ಮಾಡುವ ಪಂಥದ ಹಲವು ಸಂನ್ಯಾಸಿಗಳು. ಕಣ್ಣಿಗೆ ಇಂಪು! ಸಡಗರ-ಸಂಬ್ರಮ!! 
               ಒಬ್ಬ ಸಾಧು ಚಂಡೆ ಹೊಡೆತಕ್ಕೆ ನರ್ತಿಸಿದಾಗ ಆ ಸಂನ್ಯಾಸಿಯನ್ನು ನಾನು ಕೇಳಿದೆ " ಆಪ್ ಭೀ ನರ್ತನ್ ಕರ್ತೇ ಹೈ"  ಆ ಸಂನ್ಯಾಸಿ ಹೇಳಿದರು "ಆನಂದ್ ಹೀ ಭಗವಾನ್ ಹೈ"

   ಸಮಾವೇಶದಲ್ಲಿ "ಗುರುಚರಿತ್ರೆ ಪಾರಾಯಣ" "ಹವನ ಹೋಮಗಳು" ಸಂಗೀತ ಕಛೇರಿ" "ಸಾಧುಸಂತರ ಉಪನ್ಯಾಸ" ಹೀಗೆ ವಿಭಿನ್ನ ಕಾರ್ಯಕ್ರಮಗಳು ನಡೆಯುತ್ತಿವೆ. ಆಶ್ಚರ್ಯವೆಂದರೆ ಇಂತಾ ಒಂದು ಬೃಹತ್ ಕಾರ್ಯಕ್ರಮದಲ್ಲಿ ಭಕ್ತರು ಮಾಡುತ್ತಿದ್ದ ಸೇವೆ! ನೂರಾರು  ಮಹಿಳೆಯರು ವಿಶಾಲವಾದ ಜಾಗದಲ್ಲಿ   ಒಟ್ಟಾಗಿ ಕುಳಿತು ತರಕಾರಿ ಹೆಚ್ಚಿ, ತೆಂಗಿನ ಕಾಯಿ ತುರಿದು ಬೃಹತ್ ಪ್ರಮಾಣದ ಅಡಿಗೆ ತಯಾರಿಗೆ ಸಹಕರಿಸುತ್ತಿದ್ದರೆ ಯುವಕರು ಸಾಮಾನು ಸರಂಜಾಮುಗಳನ್ನು ಸರಬರಾಜು ಮಾಡುವಲ್ಲಿ ತೊಡಗಿಸಿಕೊಂಡಿದ್ದರು. ಅಡಿಗೆಯವರು ಅಡಿಗೆಯನ್ನು  ಸೇವಾಮನೋಭಾವದಿಂದಲೇ ಮಾಡುತ್ತಿದ್ದರು  "ಮಾಡಿ ಮಾಡಿ ಎಳೆಯುತ್ತಿದ್ದರು" ಎಂದರೆ ತಪ್ಪಾಗಲಾರದು. ಪಾಲ್ಗೊಂಡ  ಎಲ್ಲರಿಗೊ ಊಟ,ತಿಂಡಿ, ಪಾನೀಯ ವ್ಯವಸ್ಥೆಗಳು ಜಾತ್ರೆಯಂತೆ ನಡೆದಿತ್ತು!

ವಿಶ್ವಹಿಂದು ಪರಿಷತ್, RSS ಅಂತಹ ಸಂಘಟೆಗಳಾಗಲೀ, ಆಥವಾ ರಾಮಕೃಷ್ಣ    ಮಿಷನ್ ಮುಂತಾದ  ಸಂಸ್ಥೆಗಳಾಗಲೀ, ಒಂದು ಬೃಹತ್ ಕಾರ್ಯಕ್ರಮವನ್ನು ನಡೆಸಬೇಕೆಂದರೆ ಅದಕ್ಕೆ ಒಂದೆರಡು ವರ್ಷಗಳ ತಯಾ ರಿಯನ್ನೇ ನಡೆಸುತ್ತವೆ. ಅದಕ್ಕಾಗಿ ಸಮಿತಿಗಳು ರಚನೆಯಾಗಿ , ಹಲವಾರು ಸಭೆಗಳು ನಡೆಯುತ್ತವೆ. ಆದರೆ ಇಷ್ಟೆಲ್ಲಾ ಬೃಹತ್ ಕಾರ್ಯಕ್ರಮವು ನಡೆಯಲು ಅಷ್ಟೆಲ್ಲಾ ವ್ಯವಸ್ಥಿತ ತಯಾರಿ ಏನಿಲ್ಲ. ರಾಜ್ಯಮಟ್ಟದ ಪ್ರಭಾವಿ ವ್ಯಕ್ತಿಗಳ ಸಮಿತಿಯೇನೂ ರಚನೆಯಾಗಿಲ್ಲ. ಪೂಜ್ಯ ವೆಂಕಟಾಚಲ ಅವಧೂತರ ನೂರಾರು ಶಿಷ್ಯರನ್ನು ಸಂಪರ್ಕಿಸಿ ಯೋಜನೆ ರೂಪಿಸಿದವರು ಶ್ರೀ ವಿದ್ಯಾಧೀಶರೆಂಬ ಶಿಷ್ಯರು.  ಸಮಿತಿ ಎಂದು ರಚಿಸಿಕೊಂಡಿದ್ದರೂ ಪರಿಚಿತ ಹತ್ತಾರು ಜನರನ್ನು ಅದರಲ್ಲಿ ಜೋಡಿಸಿರಬಹುದು.

        ಇಂತಾ ಬೃಹತ್ ಕಾರ್ಯಕ್ರಮದ ಯೋಜನೆ ಮಾಡುವಾಗ ನನ್ನನ್ನು ಮೂರ್ನಾಲ್ಕು ಸಲ ಶ್ರೀ ವಿದ್ಯಾಧೀಶರು ಭೇಟಿಮಾಡಿದ್ದಾರೆ. ಆಗ ನಾನು ಇಂತಾ ಬೃಹತ್ ಕಾರ್ಯಕ್ರಮ ರೂಪಿಸಲು ಹಣಕ್ಕೇನು ಮಾಡುತ್ತೀರೆಂದು ಪ್ರಶ್ನಿಸಿದಾಗ  ತಮ್ಮ ಹೆಗಲಿನಲ್ಲಿದ್ದ ಜೋಳಿಗೆಯನ್ನು ತೋರಿಸಿ ಅವರು ನೀಡುತ್ತಿದ್ದ ಉತ್ತರ " ಗುರು ಕೊಟ್ಟ ಜೋಳಿಗೆ ಇದೆ"

ನನಗೆ ನಿಜವಾಗಿ ಅಚ್ಚರಿಯೂ ಆತಂಕವೂ ಆಗುತ್ತಿತ್ತು. ಆದರೆ ಅವರಿಗೆ ಗುರು ನಡೆಸುತ್ತಾನೆಂಬ ಅಚಲ ವಿಶ್ವಾಸ! ಅಂತೂ ಬೃಹತ್  ಕಾರ್ಯಕ್ರಮವು ಅದ್ಧೂರಿಯಾಗೇ ನಡೆದಿದೆ. ವ್ಯವಸ್ಥೆಯಲ್ಲಿ  ವಿಶ್ವಹಿಂದೂ ಪರಿಷತ್ತಿನಂತಹ ಧಾರ್ಮಿಕ ಕಾರ್ಯಕರ್ತರು ಇನ್ನೂ ಹೆಚ್ಚು ರೀತಿಯಲ್ಲಿ ಜೋಡಿಸಿಕೊಂಡಿದ್ದರೆ ಚೆನ್ನಾಗಿತ್ತು. ಎಂಬುದು ನನ್ನ ಅನಿಸಿಕೆ. ಅಂತೂ ಇಂತಾ ಧರ್ಮಜಾಗೃತಿಯ ಕೆಲಸಗಳು ನಡೆಯುತ್ತಿರಬೇಕು.

          ವೇದಸುಧೆಯ ಉದ್ಧೇಶವೆಂದರೆ ನಿರಂತರವಾಗಿ ಸಾಮಾನ್ಯ ಜನರಲ್ಲಿ ವೇದದ ಅರಿವು ಉಂಟು ಮಾಡಿಸುವುದು. ವೇದಭಾರತಿಯ ಹೆಸರಲ್ಲಿ ಆ ಕೆಲಸ ನಡೆಯುತ್ತಲೇ ಇದೆ. ವೇದ ಭಾರತಿಯ ಹಲವಾರು ಸದಸ್ಯರು  ಇಂತಾ ಬೃಹತ್ ಕೆಲಸದಲ್ಲಿ ಸ್ವಲ್ಪವಾದರೂ ಜೋಡಿಸಿಕೊಂಡಿದ್ದಾರೆ. ಬರುವ ನವಂಬರ್ ಎರಡರವರಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು  ಈಗಲೂ ಅವಕಾಶ ಇದ್ದೇ ಇದೆ.

ಸ್ಥಳ:

ಬಾಣಾವರ . ಅರಸೀಕೆರೆ ತಾಲ್ಲೂಕು, ಹಾಸನ ಜಿಲ್ಲೆ.

ಶಿವಮೊಗ್ಗ, ಬೆಂಗಳೂರು, ಮೈಸೂರು, ತುಮಕೂರುಗಳಿಂದ ರೈಲಿನಲ್ಲಿ ಬರುವವರು ಅರಸೀಕೆರೆಯಲ್ಲಿ ಇಳಿದು, ಅಲ್ಲಿಂದ  ಅರ್ಧಗಂಟೆ ಬಸ್ ನಲ್ಲಿ ಪ್ರಯಾಣಿಸುವುದು ಉತ್ತಮ. 

ಸೋಮವಾರ, ಮಾರ್ಚ್ 31, 2014

“ಶ್ರೀಪವನಸುಮ”



ಇಂತವರನ್ನು ನೋಡಿ ಬದುಕುವುದನ್ನು ಕಲೀಬೇಕು.ಇಂದಿನ ಮಕ್ಕಳಿಗೆ ಅವರನ್ನು ನೋಡಿ ಕಲಿಯಲು ಈಗ ಅವರು ಇಲ್ಲ. ಇದ್ದಾಗ ನಮ್ಮೂರ ಸಾಮರಸ್ಯಕ್ಕಾಗಿ ಅವರು ಮಾಡಿದ ಪ್ರಯತ್ನವೆಲ್ಲಾ ವ್ಯರ್ಥವಾಯ್ತು. ಒಬ್ಬ ಹಿರಿಯರು ಯಾಕೆ ಹೇಳ್ತಾರೆ! ಅವರ ಅಂತರಂಗದ ತುಡಿತವೇನು? ಅನ್ನೋದು ನಮ್ಮೂರಿನ ಜನರಿಗೆ ಗೊತ್ತಾಗಲೇ ಇಲ್ಲ.ನನ್ನ ಮದುವೆ ಸಂದರ್ಭದಲ್ಲಿ ಎಲ್ಲರನ್ನೂ ಒಂದು ಮಾಡಬೇಕು ಅಂತಾ ಎಷ್ಟು ಪ್ರಯತ್ನ ಪಟ್ಟರು ಗೊತ್ತಾ? ಆದರೆ ಜನರು ಅವರ ಮಾತು ಕೇಳಲೇ ಇಲ್ಲ. ಅಡಲ್ಟ್ ಕಂಠಿ..ಅಂದರೆ ಹಲವರಿಗೆ ಗೊತ್ತಾಗುತ್ತೆ. ವಯಸ್ಕರ ಶಿಕ್ಷಣ ಇಲಾಖೆಗೆ ಸಾಮಾನ್ಯ ನೌಕರನಾಗಿ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಯಾಗಿ ಉತ್ತಮವಾದ ಹೆಸರು ಮಾಡಿದವರು ಹೆಚ್.ಆರ್.ಶ್ರೀಕಂಠಯ್ಯನವರು.ಮೈಸೂರಿನಲ್ಲೇ ಬಹಳ ವರ್ಷ ಸೇವೆ. ಮೈಸೂರು ಕೃಷ್ಣಮೂರ್ತಿಪುರಮ್ ನಲ್ಲಿ ಈಗಲೂ ಅವರ ಹಲವಾರು ಒಡನಾಡಿಗಳಿದ್ದಾರೆ. ಹುಟ್ಟಿದ್ದು ಹರಿಹರಪುರವಾದರೂ ತಂದೆಯನ್ನು ಚಿಕ್ಕ ವಯಸ್ಸಿನಲ್ಲಿ ಕಳೆದುಕೊಂಡು ಪಟ್ಟಣ ಸೇರಿದರು. ಕಷ್ಟ ಪಟ್ಟು ಮೇಲೆ ಬಂದರು. ವಯಸ್ಕರ ಶಿಕ್ಷಣ ಇಲಾಖೆಯಲ್ಲಿ ಸೇವೆ ಮಾಡಿ ಹೆಸರು ಮಾಡಿದರು. ನಮ್ಮ ಸೋದರತ್ತೆಯ ಮಗಳು ಪಾರ್ವತಿಯನ್ನು ಮದುವೆಯಾಗಿ ನಮ್ಮ ಮನೆಗೆ ಹತ್ತಿರವಾಗಿಬಿಟ್ಟರು. ನಮ್ಮ ಅಪ್ಪ -ಅಮ್ಮ ಇವರನ್ನೂ ಮತ್ತು ಪಾರ್ವತಿಯ ಮತ್ತೊಬ್ಬ ಅಕ್ಕ ಸೀತಾಲಕ್ಷ್ಮಿಯನ್ನು ನಮ್ಮ ಮನೆಯ ಹಿರಿಯ ಮಕ್ಕಳೆಂದು ಭಾವಿಸಿದ್ದರು. ಅಷ್ಟು ಅನ್ಯೋನ್ಯವಾಗಿದ್ದರು. ಶ್ರೀಕಂಠಯ್ಯನವರಿಗೆ ಐದು ಜನ ಹೆಣ್ಣು ಮಕ್ಕಳು. ಒಬ್ಬ ಮಗ. ಐದೂ ಜನ ಅಳಿಯಂದಿರು ಮನೆಯ ಮಕ್ಕಳಂತೆ ಇದ್ದಾರೆ. ಎಲ್ಲರಿಗೂ ಇವರು ತಂದೆಯ ಸಮಾನರಾಗಿದ್ದರು. ಅಂದಿನ ಕಾಲದಲ್ಲಿ ಐದು ಜನ ಹೆಣ್ಣುಮಕ್ಕಳಿಗೆ ಮದುವೆ ಮಾಡುವುದೆಂದರೆ ಸುಲಭದ ಮಾತಲ್ಲ. ಆದರೆ ನಮ್ಮ ಕಂಠಿ ಮಾವ ಎಷ್ಟು ಚೆನ್ನಾಗಿ ಅವರ ಜವಾಬ್ದಾರಿ ನಿರ್ವಹಿಸಿಬಿಟ್ಟರೆಂದರೆ ಹೆಣ್ಣು ಮಕ್ಕಳು ಅಳಿಯಂದಿರು ಮತ್ತು ಮಗ ಸೊಸೆ ಇವರೊಡನೆ ಅವರ ಜೀವನ ಸ್ವರ್ಗದಂತಿತ್ತು. ಒಂದು ಘಟನೆ ತಿಳಿಸಿ ಬಿಡುವೆ. ಇವರು ನಿವೃತ್ತರಾಗಿ ಮೈಸೂರಲ್ಲಿದ್ದರು. ಮಗನಿಗೆ ಬೆಂಗಳೂರಿನಲ್ಲಿ ಕೆಲಸವಾಯ್ತು. ಇವರು ಬೆಂಗಳೂರಿಗೆ ಶಿಫ್ಟ್ ಆಗಬೇಕಾಯ್ತು. ಬೆಂಗಳೂರಿನಲ್ಲಿದ್ದ ಇವರ ಹಿರಿಯ ಮಗಳು ವಸಂತ ಮೈಸೂರಿಗೆ ಬರಬೇಕಾಯ್ತು. [ ಕಾರಣ ಗೊತ್ತಿಲ್ಲ] ವಸಂತನ ಸ್ವಂತ ಮನೆ ಬೆಂಗಳೂರಿನಲ್ಲಿತ್ತು. ಕಂಠಿ ಮಾವನ ಸ್ವಂತಮನೆ ಮೈಸೂರಿನಲ್ಲಿ. ಇಬ್ಬರೂ ಅವರವರ ಸ್ವಂತ ಮನೆಯಲ್ಲಿ ವಾಸವಾಗಿದ್ದರು. ಈಗ ಇವರು ಬೆಂಗಳೂರಿಗೆ ಅವರು ಮೈಸೂರಿಗೆ ಶಿಫ್ಟ್ ಆಗಬೇಕಾಯ್ತಲ್ಲ. very simple. ಇಬ್ಬರೂ ತಮ್ಮ ತಮ್ಮ ಬಟ್ಟೆಯನ್ನು ಮಾತ್ರ ಸೂಟ್ ಕೇಸ್ ಗೆ ತುಂಬಿಕೊಂಡರು. ಇವರು ಅವರ ಮನೆಗೆ ಅವರು ಇವರ ಮನೆಗೆ ಶಿಫ್ಟ್ ಆಗಿ ಬಿಟ್ಟರು!!! ಅಲ್ಲಿದ್ದ ಸಾಮಾನು ಸರಂಜಾಮು ಅಲ್ಲೇ.ಇಲ್ಲಿದ್ದ ಸಾಮಾನು ಸರಂಜಾಮು ಇಲ್ಲೇ. ಈತರ ಮನೆ ಬದಲಿಸಿದ ಮತ್ತೊಂದು ಘಟನೆ ಇದ್ದರೆ ತಿಳಿಸ್ತೀರಾ? ಯಾಕೋ ಇವತ್ತು ಅವರ ನೆನಪಾಯ್ತು. ಬರೆದು ಬಿಟ್ಟೆ.ಅಷ್ಟೆ. ಈ ಘಟನೆಯನ್ನು ಫೇಸ್ ಬುಕ್ ನಲ್ಲಿ ಬರೆದಿದ್ದೆ. ಅದನ್ನು ಓದಿದ ನಾಗಮಣಿ ನನಗೆ ಫೋನ್ ಮಾಡಿದ್ಲು. ಶ್ರೀಧರಾ, ನಮ್ಮಪ್ಪನ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದು ಅದರಲ್ಲಿ ವಸಂತ ಮತ್ತು ಅಪ್ಪ ಮನೆಯನ್ನು ಬದಲಿಸಿಕೊಂಡಿದ್ದನ್ನು ಬರೆದಿದ್ದೀಯಲ್ಲಾ, ಅದಕ್ಕಿಂತ ವಿಚಿತ್ರವಾದ ಇನ್ನೊಂದು ಕಥೆ ಕೇಳು, ಅಂದ್ಲು. ಹೇಳಮ್ಮಾ ಅಂದೆ…… ನೋಡು ಶ್ರೀಧರ, ಆ ದಿನಗಳಲ್ಲಿ ನಾವು ಎಲ್ಲಾ ಕಡೆ ಸರ್ವೀಸ್ ಮಾಡಿ ಮೈಸೂರಿಗೆ ನಮ್ಮ ಮನೆಯವರಿಗೆ ವರ್ಗವಾಗಿತ್ತು. ಆ ಹೊತ್ತಿಗೆ ನನ್ನ ಎಲ್ಲಾ ಅಕ್ಕ ತಂಗಿಯರೂ ಮನೆ ಮಾಡಿಕೊಂಡಿದ್ದರು.ನಮಗೆ ಮಾತ್ರ ಸ್ವಂತ ಮನೆ ಇರಲಿಲ್ಲ. ಮೈಸೂರಲ್ಲಿ ವಾಸವಿದ್ದ ವಸಂತಳೂ ವಾಪಸ್ ಬೆಂಗಳೂರಿಗೆ ಹೋಗಿದ್ದಳು. ಮಂಜು ಬೆಂಗಳೂರಿನಲ್ಲಿ ಮನೆ ಕಟ್ಟಿದ್ದರಿಂದ ಅಪ್ಪ-ಅಮ್ಮ ಮಂಜು ಮನೆಯಲ್ಲಿದ್ದರು. ವಸಂತ ಅವಳ ಸ್ವಂತ ಮನೆಯಲ್ಲಿದ್ದಳು. ಸರಿ ಮೈಸೂರಿನ ನಮ್ಮ ಅಪ್ಪನ ಮನೆ ಖಾಲಿ ಇತ್ತು. ನಮ್ಮ ಅಪ್ಪ ಫೋನ್ ಮಾಡಿದರು “ ನಾಗು , ನಿನ್ನ ಯಜಮಾನರಿಗೆ ಮೈಸೂರಿಗೆ ವರ್ಗವಾಗಿದೆ. ನನ್ನ ಮನೆಯೂ ಖಾಲಿ ಇದೆ. ಮಕ್ಕಳೆಲ್ಲಾ ಮನೆ ಕಟ್ಟಿದ್ದಾಗಿದೆ. ಮೈಸೂರ ಮನೆಯಲ್ಲಿ ನೀವಿದ್ದು ಬಿಡಿ, ಫೋನ್ ನ್ನಲ್ಲಿ ಮಾತನಾಡಿ ನನಗೆ ಮೈಸೂರು ಮನೆಯನ್ನು ಗಿಫ್ಟ್ ಆಗಿ ಕೊಟ್ಟು ಬಿಟ್ಟರು ಕಣೋ!....[ಈ ಮಾತು ಹೇಳುವಾಗ ನಾಗು ಅಳುತ್ತಿದ್ದಳು] ಕೆಲವು ವರ್ಷಗಳು ಮೈಸೂರಲ್ಲಿದ್ದೆವು. ಒಂದಿನ ಅಣ್ಣ ಫೋನ್ ಮಾಡಿ “ ಅಲ್ಲಾ ನಾಗು, ಮಹಾರಾಜನೇ ಈಗ ಮೈಸೂರು ಅರಮನೆಯಲ್ಲಿಲ್ಲ.ನೀನ್ಯಾಕೆ ಮೈಸೂರಲ್ಲಿದ್ದೀಯ. ಎಲ್ಲಾ ಮಕ್ಕಳೂ ಬೆಂಗಳೂರಿನಲ್ಲಿರುವಾಗ ನೀನು ಅಷ್ಟು ದೂರ!!!![ಮೈಸೂರು ಬೆಂಗಳೂರಿಗೆ ತುಂಬಾ ದೂರವಂತೆ!!!, ಕಂಠಿ ಮಾವಂಗೆ ಮಕ್ಕಳನ್ನು ಒಂದು ದಿನ ಬಿಟ್ಟು ಇರಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಮೈಸೂರು ಬಲು ದೂರ ಎನ್ನಿಸಿರಬೇಕು] ಮೈಸೂರ ಮನೆಯನ್ನು ಮಾರಿಬಿಡು,ಬೆಂಗಳೂರಿಗೆ ಬಂದು ಬಿಡು. ಹಾಗೆ ಮಾಡಿದೆವು ಶ್ರೀಧರ. ಮೈಸೂರು ಮನೆ ಮಾರಿ ಜೊತೆಗೆ ಸ್ವಲ್ಪ ದುಡ್ಡು ಹಾಕಿ ಮನೆ ಕಟ್ಟಿದೆವು. ಮನೆ ಹೆಸರು ಏನಂತ ಗೊತ್ತಾ? “ ಶ್ರೀಪವನಸುಮ” 

 ಶ್ರೀ- ಶ್ರೀಕಂಠಯ್ಯ[ಅಪ್ಪ] 
 ಪ- ಪದ್ಮ[ ತಂಗಿ] ಪಾರ್ವತಿ-ತಾಯಿ 
 ವ- ವಸಂತ –ಅಕ್ಕ 
 ನ- ನಾಗಮಣಿ[ತಾನೇ] 
 ಸು- ಸುಶೀಲ[ಅಕ್ಕ] 
 ಮ- ಮಂಜು[ತಮ್ಮ]ಮಂಗಳ[ತಂಗಿ]

 ಅಪ್ಪನ ಮನೆಯನ್ನು ಮಗಳಿಗೆ ಗಿಫ್ಟ್ ಅಂತಾ ಕೊಟ್ಟಾಗ ಯಾವ ಅಕ್ಕತಂಗಿಯರಾಗಲೀ, ತಮ್ಮನಾಗಲೀ ಚಕಾರ ಎತ್ತದೆ ಸಂತೋಷವಾಗಿ ಒಪ್ಪಿದ್ದರಿಂದ ಎಲ್ಲರ ಹೆಸರಿನಲ್ಲಿ “ಶ್ರೀಪವನಸುಮ” ನಿರ್ಮಣವಾಗಿ ಅದರಲ್ಲಿ ನಾಗಮಣಿ-ನಾರಾಯನಮೂರ್ತಿಯವರ ಕುಟುಂಬ ವಾಸವಾಗಿದೆ. ಇಂತಾ ಮತ್ತೊಂದು ಉಧಾಹರಣೆ?
ಶರೀರ ಸ್ಪಂಧಿಸದಿದ್ದರೇನು ನಡಿಯಮ್ಮಾ ಬರ್ತೀನಿ ಟೂರ್ ಹೋಗೋಣ! [ಕೊನೆಯ ದಿವಸಗಳು]


ಕೊನೆಯ ದಿನಗಳಲ್ಲೂ ಮಕ್ಕಳನ್ನು ಸಂತೋಷ ಪಡಿಸುವ ಪರಿ!

ಅಕ್ಕ ನರಸಮ್ಮ [ದೊಡ್ಡಪ್ಪನ ಮಗಳಿರಬಹುದು] ನನ್ನು ನೋಡುವ ಹಾಗಿದೆ ನಡೀರಿ ಕೊಣನೂರಿಗೆ ಹೋಗಿ ಬಂದು ಬಿಡೋಣ. ಕೂಡಲೇ ಮಕ್ಕಳು ರಡಿಯಾಗೇ  ಬಿಟ್ಟರು.ಕೊಣನೂರಿನಲ್ಲಿ ಅಕ್ಕನೊಡನೆ.

ಕೊಣನೂರಿನಲ್ಲಿ ಅಕ್ಕನೊಡನೆ.



ಅಕ್ಕಾ, ಹೇಗಿದೀಯಾ?

 ಆ ದೇವರು ನಿನ್ನ ಸಂಸಾರವನ್ನು ಚೆನ್ನಾಗಿಟ್ಟಿರಲಿ ಕಣೋ.