ಮಂಗಳವಾರ, ಜೂನ್ 5, 2012

ಯಾವುದು ಸರಿ? ಯಾವುದು ತಪ್ಪು?



ಯಾವುದು ಸರಿ? ಯಾವುದು ತಪ್ಪು? ಅನ್ನೋ ವಿಚಾರದಲ್ಲಿ ,ಇದು ಹೀಗೇ ಅಂತಾ ಯಾರೂ ಹೇಳಲು ಸಾಧ್ಯವಿಲ್ಲ.ನನಗೆ ಇದು ಒಳ್ಳೆಯ ವಿಚಾರ ಎಂದು ಮನವರಿಕೆಯಾಗಿ ಈ ವಿಚಾರಕ್ಕೆ ನಾನು ಸ್ವಲ್ಪ ಪ್ರಚಾರಕೊಟ್ಟರೆ ನಾಲ್ಕು ಜನರಿಗೆ ಒಳ್ಳೆಯದಾಗಬಹುದು, ಎಂದು ನಾನು ಭಾವಿಸುತ್ತೀನಲ್ಲಾ, ಅಲ್ಲೇ ನಾನು ತಪ್ಪು ಮಾಡುತ್ತಿದ್ದೀನಿ, ಅಂತಾ ನನಗೆ ಅನುಭವವಾಗ್ತಾ ಇದೆ. ಎಲ್ಲಕ್ಕಿಂತಲೂ ಅನುಭವದ ಅರಿವಿದೆಯಲ್ಲಾ, ಅದೇ ಹೆಚ್ಚು ಸೂಕ್ತ ಎಂಬುದು ನನ್ನ ಅಭಿಪ್ರಾಯ. ಅದು ನಿಮ್ಮ ಅಭಿಪ್ರಾಯ ಆಗಬೇಕಿಲ್ಲ. ಅಂದಹಾಗೆ ಈ ಗುಂಪು ಆರಂಭಿಸುವಾಗಲೇ ಅವರವರ ಮನದಾಳದ ಮಾತಿಗೆ ಇದು ವೇದಿಕೆ ಎಮ್ದು ಅರಿಕೆ ಮಾಡಿದ್ದೀನಷ್ಟೇ. ಅವರವರ ಮನದಾಳದ ಮಾತನ್ನು ಮುಕ್ತವಾಗಿ ಇಲ್ಲಿ ಒದರಿದರಾಯ್ತು. ನಾನು ಬರೆಯುತ್ತಿರುವುದು ನನಗಾಗಿ ಎಂಬ ಭಾವನೆ ಇದ್ದರೆ ಆಯ್ತು. ಯಾರ ಮೆಚ್ಚುಗೆಯನ್ನೂ ನಿರೀಕ್ಷಿಸುವುದು ಬೇಡ. ಈ ಫೇಸ್ ಬುಕ್ ನಲ್ಲಿ like and comments ಇಲ್ಲದಿದ್ದರೆ ಚೆನ್ನಾಗಿತ್ತು. ಹೇಲಬೇಕೆಂಬುದನ್ನು ಬರೆದು ಪೋಸ್ಟ್ ಮಾಡಿದರೆ ಮುಗಿಯಿತು. ಮುಂದಿನವರು ತಮ್ಮ ವಿಚಾರವನ್ನು ಮುಂದಿನ ಪೋಸ್ಟ್ ನಲ್ಲಿ ಬರೆದರಾಯ್ತು. ಅದೇ ಸರಿ ತಪ್ಪು ಎಂಬುದು ಅವರವರ ಭಾವಕ್ಕೆ ಬಿಟ್ಟಿದ್ದು, ಎಂಬುದನ್ನು ವಿವರಿಸಲು ಈ ಹೆಣಗಾಟ. 

ಲೋಕೋ ಭಿನ್ನ ರುಚಿ: ಅನ್ನೋ ಮಾತು ಕೇಳಿದ್ದೀವಿ. ನಮ್ಮ ನಮ್ಮ ಆಸಕ್ತಿ ಅಭಿರುಚಿಗಳು ಬೇರೆ ಬೇರೆ. ನನ್ನಂತೆ ನೀವಿರಬೇಕಿಲ್ಲ. ನಿಮ್ಮಂತೆ ನಾನಿರಬೇಕಿಲ್ಲ. ಒಮ್ಮೊಮ್ಮೆ ಏನಾಗುತ್ತೆ, ಅಂದ್ರೆ , ಕೆಲವರ ಮಾತು ಹಿತವಾಗುತ್ತೆ, ಆಗ ನನ್ನ-ಅವರ ಆಸಕ್ತಿ ಗಳು ಹೆಚ್ಚು ಕಮ್ಮಿ ಸಮಾನ ವಾಗಿರಬಹುದು. ಎಂದು ತಿಳಿಯಬಹುದು. ಆದರೂ ಅದೂ ಕೂಡ ಶಾಶ್ವತ ಅಲ್ಲ, ಆ ಸಂದರ್ಭದಲ್ಲಿ ಆ ಮಾತು ನನಗೆ ಹಿತವಾಗಿ ಕಂಡಿರಬಹುದು. ಆಗಿನ ನನ್ನ ಮನಸ್ಸಿನ ಸ್ಥಿತಿಯ ಮೇಲೂ ಹಿತ-ಅಹಿತ ಎಂಬುದು ನಿಂತಿದೆ. 

ಸಸ್ಯಾಹಾರ ಆರೋಗ್ಯಕ್ಕೆ ಉತ್ತಮ ಎಂಬ ಬರವಣಿಗೆ ನೋಡಿದಾಗ ಹಲವರು ಅದಕ್ಕೆ ವಿರೋಧವನ್ನೂ ಮಾಡಿದರು.ಅದು ಅವರ ಇಚ್ಚೆ. ಅದು ನನ್ನ ಇಚ್ಚೆ ಆಗಬೇಕಿಲ್ಲ. 

ಯಾವಾಗಲೂ ಭಗವದ್ಗೀತೆಯ ಒಂದು ಮಾತು ನನ್ನ ಸ್ಮೃತಿಪಟಲದಲ್ಲಿ ನೆನಪಾಗುತ್ತಲೇ ಇರುತ್ತದೆ" ಉದ್ಧರೇದಾತ್ಮ ನಾತ್ಮಾನಾಂ,ಆತ್ಮಾನ ಮವಸಾಧಯೇತ್, ಆತ್ಮೈವಹ್ಯಾತ್ಮನೋ ಬಂಧು: ,ಆತ್ಮೈವ ರಿಪುರಾತ್ಮನ:"........ನಮ್ಮ ಬರವಣಿಗೆ ಯಿಂದ ಏನೋ ಉದ್ಧಾರವಾಗಿಬಿಡುತ್ತದೆಂದು ಭಾವಿಸುವವರು ಶ್ರೀ ಕೃಷ್ಣನ ಈ ಮಾತನ್ನು ನೆನಪಿನಲ್ಲಿಟ್ಟುಕೊಳ್ಳಬೇಕಲ್ಲವೇ? ............
ಇದೂ ಅಷ್ಟೆ, ನನ್ನ ಈಗಿನ ಮನ:ಸ್ಥಿತಿ ಅಷ್ಟೇ. ನಿನ್ನೆ ಇದ್ದಂತೆ,ಈಗಿಲ್ಲ, ಈಗಿನಂತೆ ನಾಳೆ ಇರಬೇಕಿಲ್ಲ. ಅನುಭವ ಆಗ್ತಾ ಆಗ್ತಾ ಮಾಗಲೂ ಬಹುದು, ಕೊಳೆಯಲೂ ಬಹುದು. ಎಲ್ಲವೂ ನಮ್ಮ ಕೈಲಿದೆ, ಅಲ್ಲವೇ?

3 ಕಾಮೆಂಟ್‌ಗಳು:

  1. <> ಇದು ಎಲ್ಲರಿಗೂ ಅನ್ವಯಿಸುವ ಒಳ್ಳೆಯ ಮಾತು, ನಾನೂ ಒಪ್ಪುತ್ತೇನೆ.

    ಪ್ರತ್ಯುತ್ತರಅಳಿಸಿ
  2. <> ಇದನ್ನು ನಾನೂ ಒಪ್ಪುತ್ತೇನೆ. ಮೇಲಿನ ವಾಕ್ಯ 'ಕಾಪಿ' ಮಾಡಿ ಪೇಸ್ಟ್ ಮಾಡಿದ್ದು ಪ್ರಕಟವಾಗಲಿಲ್ಲವಾದ್ದರಿಂದ ಪುನಃ ಬರೆದು ಪ್ರಕಟಿಸಿರುವೆ.

    ಪ್ರತ್ಯುತ್ತರಅಳಿಸಿ